ಕಾಷಾಯಾಂಬರತ್ಯಾಗಿ ವಿರಾಗಿ






  ಭಗವಾನ್‌ ಸುಬ್ರಾಯ ಮಹಾರಾಜರು ತಮ್ಮ ದಿವ್ಯವಾದ ಶರೀರಕ್ಕೆ ಪರದೆಯೊಂದನ್ನು ಎಳೆದುಕೊಂಡು ಕುಳಿತುಕೊಳ್ಳುವುದಕ್ಕೆ ಕೆಲವೇ ಕೆಲವು ದಿನಗಳ ಮೊದಲು ನಡೆದ ಘಟನೆ. ಸದ್ಗುರುಗಳು ಕೆಲ ದಿನಗಳಿಂದ, "ನೋಡಿರಿ ದತ್ತನ ದಿವ್ಯ ಸ್ವರೂಪ ರಾಜಿಪ ದಿನಮಣಿ ಪ್ರಭೆಯ ಪ್ರದೀಪ" ಎಂಬ ಭಜನೆಯನ್ನು ಗುಣುಗುಣಿಸುತ್ತಿದ್ದರು. ವಾಹನದಲ್ಲಿ ಹೋಗುವಾಗ ಅದರ ಧ್ವನಿಮುದ್ರಣವನ್ನು ಹಾಕಿಸಿಕೊಂಡು ಕೇಳುತ್ತಿದ್ದರು. ಆ ಭಜನೆಯನ್ನು ತಮ್ಮ ಶಿಷ್ಯರುಗಳಿಂದ ಹೇಳಿಸುತ್ತಿದ್ದರು. ಭಜನೆ ಹೀಗೆ ಸಾಗುತ್ತಿತ್ತು_

         ನೋಡಿರಿ ದತ್ತನ ದಿವ್ಯ ಸ್ವರೂಪ ರಾಜಿಪ ದಿನಮಣಿ ಪ್ರಭೆಯ ಪ್ರದೀಪ ।।ಪ।।
         ಭಸ್ಮ ಸುಗಂಧ ಸುಲೇಪಿತ ವದನಾ ಪದ್ಮಾಸನ ಶುಭ ಮಂಗಳಮಯನಾ ।।೧।।
         ಕಾಲೊಳು ಪಾದುಕೆ ಧರಿಸಿದ ಶೌರಿ ಕಾಷಾಯಾಂಬರಧಾರಿ ಉದಾರಿ ।।೨।।
        ಕೊರಳೊಳಗೆಸೆಯುವ ನವತುಲಸೀ ಮಾಲಾ ಕರದೊಳಗೊಪ್ಪುವ ಡಮರು ತ್ರಿಶೂಲ ।।೩।।
        ಶಂಖ ಗದಾ ಚಕ್ರ ಪದ್ಮವಿಭೂಷಣ ಸಂಕೀರ್ತನ ಪ್ರಿಯ ಸಂಕಟಹರಣ ।।೪।।
        ಅನಸೂಯಾ ಅತ್ರಿ ಸಂಜಾತ ಪ್ರಖ್ಯಾತ ಆದಿನಾಥ ಆತ್ಮಜ್ಞಾನ ಪ್ರದಾತ ।।೫।।

ಗುರುಗಳು ಮೊದಮೊದಲು ಕಾಷಾಯಾಂಬರಧಾರಿ ಉದಾರಿ ಎಂಬ ಸಾಲನ್ನು ಹಾಗೆಯೇ ಉಚ್ಛರಿಸುತ್ತಿದ್ದವರು ಆ ದಿನ ಕಾಷಾಯಾಂಬರತ್ಯಾಗಿ ವಿರಾಗಿ ಎಂದು ಹೇಳುತ್ತ ತಮ್ಮ ಮಂಗಳಮಯವಾದ ಸ್ವರದಲ್ಲಿ ಈ ಕೆಳಗಿನಂತೆ ಹೇಳಿದರು,

    "ಕಾಷಾಯಾಂಬರಧಾರಿ ಉದಾರಿ ಎಂದು ಭಜಿಸಲ್ಪಡುವ ದತ್ತಾತ್ರೇಯನು ತನ್ನ ಮೂಲರೂಪಕ್ಕೆ ಮರಳಿ ಹೋಗುವಾಗ ಕಾಷಾಯಾಂಬರ ತ್ಯಾಗಿ ವಿರಾಗಿ ಎಂದಾಗಬೇಕು. ಕಾಷಾಯಾಂಬರತ್ಯಾಗಿಯಾಗಿ ವಿರಾಗಿಯಾಗಿರುವುದೇ ಶ್ರೀಮನ್ನಾರಾಯಣನ ಮೂಲರೂಪ. ಅದು ನೀಲ. ಈ ಸಮಸ್ತ ವಿಶ್ವವನ್ನು ಆವರಿಸಿರುವ ನೀಲ ಅದೇ. ಆತನನ್ನು ಪೂರ್ತಿಯಾಗಿ ನೋಡಬೇಕೆಂದು ಈ ಭೂಮಿಯ ಮೇಲೆ ನಿಂತು ನೋಡಿದರೆ ಆತನನ್ನು ಸರಿಯಾಗಿ ಕಾಣಲು ಸಾಧ್ಯವಿಲ್ಲ. ಈ ಭೂಮಿಯ ವ್ಯಾಪ್ತಿಯನ್ನೂ ಮೀರಿ ನೋಡಿದಾಗ ಶಾಸ್ತ್ರಗಳಲ್ಲಿ ವರ್ಣಿಸಲ್ಪಟ್ಟ ಆತನ ದಿವ್ಯವಾದ ಸ್ವರೂಪವನ್ನು ನೋಡಬಹುದು. ಡಮರು, ತ್ರಿಶೂಲ, ಯಾವಾಗಲೂ ಒಣಗದೇ ಇರುವಂತಹ ಮಾಲೆ, ದುಷ್ಟದಮನ ಮಾಡಿದಂತಹ ಪಾದವನ್ನು ಹೊಂದಿದ ರೂಪವು ಎಲ್ಲೆಡೆಗಳಲ್ಲಿ ತುಂಬಿಕೊಂಡಿರುವುದನ್ನು ಆಗ ನೋಡಬಹುದು. ವೇದಾಂತದ ತತ್ತ್ವಗಳಿಂದ, ಆನಂದದ ತತ್ತ್ವಗಳಿಂದ ತುಂಬಿಕೊಂಡಿರುವ ಆತನ ರೂಪ ಆಗ ಕಾಣುತ್ತದೆ.

     ಶಿರಸ್ಸು, ಜಟೆಯನ್ನು ಬಿಟ್ಟುಕೊಂಡಿರುವ ಅವನ ಮೂರು ಮುಖವನ್ನು ಯಾವ ರೀತಿ ನೋಡುತ್ತೀರಿ? ಬಹಳ ಜನ ಅದನ್ನು ಸತ್‌-ಚಿತ್‌-ಆನಂದ ಎಂದು ನೋಡುತ್ತಾರೆ. ಇನ್ನು ಕೆಲವರು ಇಡೀ ವಿಶ್ವವನ್ನು ಆವರಿಸಿಕೊಂಡಿರುವ ಮೂರು ವ್ಯಾಹೃತಿಗಳನ್ನು ಆತನ ಮೂರು ಮುಖಗಳೆಂದು ನೋಡುತ್ತಾರೆ. ಎಲ್ಲೆಡೆ ವ್ಯಾಪಿಸಿಕೊಂಡಿರುವ ಆತನ ವ್ಯಾಹೃತಿಗಳಲ್ಲಿ [ಭೂಃ, ಭುವಃ, ಸುವಃ] ಎಲ್ಲವೂ ಬಂದರೂ ಅದರ ಆಚೆಗೂ ಸಹ ಅವನ ಮಹಿಮೆಯೇ ಉಳಿದುಕೊಂಡಿರುತ್ತದೆ. ಎಲ್ಲಾ ದಿಕ್ಕುಗಳಲ್ಲಿಯೂ, ಸರ್ವವನ್ನೂ ದಾಟಿದ ನಂತರವೂ ಮತ್ತೆ ಉಳಿದುಕೊಳ್ಳುವುದು ಆತನ ಮಹಿಮೆ ಮಾತ್ರ.

       ಯಾವುದೇ ಕಾಲಕ್ಕೂ ಬಂತು, ಆ ಮೂಲದಿಂದ ಯಾವುದೇ ಒಂದು ಹೊರಬಿದ್ದು ಬಂದರೂ ಅದು ತನ್ನ ಮೂಲರೂಪವನ್ನು ಸೇರಬೇಕಾದರೆ ಅಲ್ಲಿಗೇ ಹೋಗಿ ಸೇರಬೇಕು. ಶುರುವಾಗಿದ್ದೂ ಅಲ್ಲಿಂದಲೇ, ನಂತರ ಮುಕ್ತವಾಗುವುದೂ ಅಲ್ಲಿಗೆ ಹೋಗಿಯೇ.
ಅದಕ್ಕಾಗಿ ಅಪಿ! ದತ್ತನ ಮೂಲಸ್ವರೂಪ ಎಂಬುದನ್ನೆಲ್ಲ ಯಾರ ಹತ್ತಿರವೂ ಆಲೋಚನೆ ಸಹ ಮಾಡಲು ಸಾಧ್ಯವಿಲ್ಲ. ಅದನ್ನು ಒಬ್ಬನಿಗೆ ಸರಿಯಾಗಿ ತಿಳಿದುಕೊಳ್ಳಬೇಕೆಂದರೆ ಲಕ್ಷ ಅಲ್ಲ ಕೋಟಿ ಜನ್ಮಗಳು ಬೇಕಾದೀತು. ಆ ಪ್ರಭುವನ್ನು ಅರಿಯಲು ಬೇಕಾದ ಪಕ್ವವಾದ ಭಕ್ತಿ ಇರುವುದು ಅತಿ ವಿರಳ. ನೀನು ಈ ಜಾಗದಲ್ಲಿ ನಿಂತು ಇಲ್ಲಿಯ ವಿಚಾರದಲ್ಲಿ ಅವನನ್ನು ನೋಡಲು ಹೋಗುತ್ತೀಯಾ. ಆದರೆ ಆತ ಹಾಗೆ ಕಾಣಿಸಲಾರ. ಆತನನ್ನು ಇಡಿಯಾಗಿ ನೋಡಬೇಕು. ಹಾಗೆ ಪೂರ್ಣವಾಗಿ ಕಂಡರೆ ಮಾತ್ರ ಆತನನ್ನು ನೋಡಿದಂತಾಗುತ್ತದೆ. ಪೂರ್ತಿಯಾಗಿ ನೋಡಹೊರಟರೆ ಮಾತ್ರ ಸಂತೋಷ.

       ಅಪಿ! ಅವನಲ್ಲಿ ಸಗುಣ, ನಿರ್ಗುಣ ಎಲ್ಲ ಬೇರೆ ಬೇರೆ ಎಂದೆಲ್ಲಾ ಇರುವುದಿಲ್ಲ. ನಮಗೆ ಆನಂದವನ್ನು ಕೊಡುವಂತಹದ್ದು ಒಂದೇ ಶುದ್ಧ ಸ್ವರೂಪ. ಅದನ್ನು ಹೊಂದಿದಾಗ ಎಂತಹವನಿಗೂ ಆನಂದವಾಗುತ್ತದೆ. ಪಿಂಗಳನಾಗನಂತಹ ಅಷ್ಟು ವಿಚಿತ್ರ ರೂಪದಲ್ಲಿ ಕುತರ್ಕ ಮಾಡುವಂತವನು ಕೂಡ ಆತನ ದಿವ್ಯ ರೂಪವನ್ನು ಕಂಡು ೧೨ ವರ್ಷಗಳವರೆಗೆ ಮೈಮರೆತು ಕುಳಿತುಬಿಟ್ಟ. ಆತನು ಕುಳಿತದ್ದು ೧೨ ಮನುಷ್ಯರ ಮಾನದ ವರ್ಷಗಳವರೆಗಲ್ಲ. ೧೨ ದೇವ ಮಾನದ ವರ್ಷಗಳವರೆಗೆ ದತ್ತನ ದಿವ್ಯರೂಪವನ್ನು ನೋಡುತ್ತ ಮೖಮರೆತು ಕುಳಿತ. ದತ್ತನ ರೂಪವೆಂದರೆ ಆ ರೀತಿಯ ಅದ್ಭುತ.

      ಅಪಿ! ಏನು ಬಾಯಲ್ಲಿ ದತ್ತ, ದತ್ತ ಎಂದು ನೀವು ಕರೆಯುತ್ತೀರೋ ಅವನನ್ನು ಯಾರಿಂದಲೂ ಅರಿಯಲು ಸಾಧ್ಯವಿಲ್ಲ. ಅವನು ಎಷ್ಟು ರೀತಿಯಲ್ಲಿ ಆವರಿಸಿಕೊಂಡು ಇದ್ದಾನೆ, ಯಾವ ರೀತಿಯಲ್ಲಿ ಆವರಿಸಿಕೊಂಡು ಇದ್ದಾನೆ, ಅವನ ವ್ಯಾಪಕತೆಯನ್ನು ಯಾವ ರೀತಿ ತಿಳಿದುಕೊಳ್ಳಬೇಕು ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. 
ಅವನನ್ನು ಅರಿಯಲು ಅವನ ಕರುಣೆ ಇದ್ದರೆ ಮಾತ್ರ ಸಾಧ್ಯ. ಅವನ ಕರುಣೆಯಿಂದ ಮಾತ್ರ ಅವನನ್ನು ನೋಡಬಹುದು ಅಷ್ಟೇ. ಅವನ ಜ್ಞಾನ ಆಗಬೇಕು ಅಂದರೆ ಅವನ ಕರುಣೆ ಬೇಕು. ಅವನ ಕರುಣೆಯ ಹೊರತು ಅವನ ಜ್ಞಾನ ಯಾರಿಗೂ ಸಿಗಲಾರದು. ಯಾವ ಒಂದು ಕ್ಷಣದಲ್ಲಿ ನೀನು ನಿನ್ನ ಭಾವನೆಯನ್ನು ಅತ್ಯಂತ ಶ್ರದ್ಧೆಯಿಂದ ಅವನಲ್ಲಿ ಇಡುವೆಯೋ ಅದೇ ಕ್ಷಣದಲ್ಲಿ ಅವನು ಅಲ್ಲಿ ಹಾಜರಿರುತ್ತಾನೆ. ಒಂದು ಕ್ಷಣ, ಒಂದು ನಿಮಿಷವೂ ಆತ ತಡ ಮಾಡಲಾರ. ಅದರರ್ಥ ನಿಮ್ಮಲ್ಲಿಯ ಭಾವನೆಯ ತೀವ್ರತೆಗೆ ತಡ ಅಷ್ಟೇ. ಇಲ್ಲಿ ಅತ್ಯಂತ ಸರಳವಾದ ಶ್ರದ್ಧೆ ಬರುವುದು ಬಹಳ ವಿರಳ. ಶ್ರೀಧರ ಸ್ವಾಮಿಗಳು ಹೇಳಿದಂತೆ ಅದ್ಯಾಪಿ ಯೋ ವಿಚರತೀಹ ಸುಧರ್ಮಗುಪ್ತ್ಯೈ [ಯಾವನು ಈಗಲೂ ಧರ್ಮರಕ್ಷಣೆಗಾಗಿ ಸಂಚರಿಸುತ್ತಿದ್ದಾನೆಯೋ] ಆ ತರಹದ ಅವಕಾಶ ಸಿಕ್ಕಿದಾಗ ಅವನೊಂದಿಗೆ ಜಾರಿಕೊಂಡುಬಿಡಬೇಕು. ಲೋಕದ ಮೇಲಿನ ಕರುಣೆಯಿಂದಲೇ ಆತನು ಸಗುಣನಾಗಿ ಬರುತ್ತಾನೆ, ಲೋಕಕ್ಕೆ ಕಾಣಿಸಿಕೊಳ್ಳುತ್ತಾನೆ. ಒಂದು ನಿರ್ದಿಷ್ಟ ಉದ್ದೇಶ ಈಡೇರಿದ ತಕ್ಷಣ ಹೊರಟುಬಿಡುತ್ತಾನೆ. ಆ ಗಳಿಗೆಯಲ್ಲಿ ಹತ್ತಿರವಿದ್ದು ದಾಟಿಕೊಂಡವನು ದಾಟಿಕೊಂಡ. ಆತನ ಕೃಪೆಯಿಂದ ಎಷ್ಟೋ ಜನರು  ಪಡೆದುಕೊಳ್ಳುತ್ತಾರೆ. ಶ್ರೀರಾಮಚಂದ್ರನ ಚರಿತ್ರೆಯಲ್ಲಿ ಸ್ವರ್ಗದ ವಿಷಯ ಬರುತ್ತದೆ. ಕೇವಲ ಶ್ರೀರಾಮನ ಜೊತೆಗೆ ಇದ್ದರು ಎಂಬ ಮಾತ್ರಕ್ಕೆ ಅವರ ಪುಣ್ಯ-ಪಾಪಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ರಾಮನು ೧೦೦೦೦ ಜನರನ್ನು ಸ್ವರ್ಗಕ್ಕೆ ಕರೆದುಕೊಂಡು ನಡೆದ. ಶ್ರೀರಾಮನ ಕೃಪೆ ಇಲ್ಲದೇ ಹೋಗಿದ್ದರೆ ಹಾಗೆ ಸಶರೀರವಾಗಿ ಸ್ವರ್ಗಕ್ಕೆ ಹೋಗಲು ಎಷ್ಟೋ ಲಕ್ಷ ವರ್ಷಗಳವರೆಗೆ ಯಜ್ಞ, ಯಾಗ, ತಪಸ್ಸನ್ನು ಮಾಡಬೇಕಾಗಿತ್ತು.

       ಭಗವಂತನ ಕೃಪೆ, ಕರುಣೆ ಆದರೆ ಆತನನ್ನು ಪಡೆಯುವುದು ಅತ್ಯಂತ ಸುಲಭ. ಕರುಣೆ ತೋರಿಸುವಲ್ಲಿ ಆತನು ಎಂದೂ ಬಿಗಿಯನ್ನು ತೋರಿಸಲಾರ. ಅವನಿಗೆ ಎಲ್ಲವೂ ತಿಳಿದಿದೆ. ಅಲ್ಲ ಅಪಿ! ತನ್ನ ಕೃತಿಯನ್ನು ತೋರಿಸಬೇಕೆಂದು ಆತನು ಒಂದು ಚಿಕ್ಕ ರೂಪದಲ್ಲಿ ಪ್ರಕಟವಾದರೆ ಈ ಲೋಕದ ಹತ್ತಿರ ಆತನನ್ನು ತಡೆದುಕೊಳ್ಳಲು ಸಾಧ್ಯ ಇಲ್ಲ. ನೆನಪಿಟ್ಟುಕೋ, ಲೋಕದ ಹತ್ತಿರ ಆತನ ಚಿಕ್ಕ ರೂಪವನ್ನು ತಡೆದುಕೊಳ್ಳುವುದು ಸಹ ಅಸಾಧ್ಯ. ಮಳ್ಳಾ! ಆ ತೇಜಸ್ಸನ್ನೆಲ್ಲಾ ನಿನ್ನ ಕಣ್ಣಲ್ಲಿ ನೋಡಲು ಸಾಧ್ಯವೇ? ಸಾಧ್ಯವಿಲ್ಲ. ಆತನ ತೇಜಸ್ಸು ಹೇಗಿರುತ್ತದೆ? ಅವನದು ಅದ್ಭುತವಾದ ತೇಜಸ್ಸು ಅಪಿ. ಅದು ಹೇಗೆ ವ್ಯಾಪಿಸಿಕೊಂಡಿರುತ್ತದೆ, ಹೇಗೆ ಕಾರ್ಯ ಮಾಡುತ್ತದೆ ಎಂಬುದು ಯಾರಿಗೂ ಅಂದಾಜು ಸಹ ಮಾಡಲು ಅಸಾಧ್ಯ. ಆದರೆ ಅತ್ಯಂತ ಸರಳ ಹೃದಯಕ್ಕೆ, ಸರಳವಾದ ಭಕ್ತಿಯಿದ್ದವನಿಗೆ ಅದು ತಾನಾಗಿಯೇ ಸಿಗುತ್ತದೆ. ನೀನು ದೊಡ್ಡ ಕಷ್ಟಪಡುವ ದಾರಿಯಲ್ಲಿ ನಿನಗೆ ತಿಳಿದಂತೆ ಹೋಗುತ್ತೀಯಾ ಅಂದರೆ ಅವನು ಸಿಗುವುದೇ ಇಲ್ಲ. ಆಗ ಅವನು ನಿನ್ನ ಮಾರ್ಗಕ್ಕಿಂತ ಕಠಿಣವಾದ ಬೇರೊಂದು ಮಾರ್ಗದಲ್ಲಿರುತ್ತಾನೆ. ನೀನು ಅಂದುಕೊಂಡಿದ್ದಕ್ಕಿಂತ ಬೇರೊಂದು ಸ್ಥಿತಿಯಲ್ಲಿರುತ್ತಾನೆ. ಅವನನ್ನು ನೀನಂದುಕೊಂಡಂತೆ ಹೊಂದಲು ಸಾಧ್ಯವಿಲ್ಲ. ಅಹಂಕಾರದಿಂದ ಅವನನ್ನು ಹೊಂದಲು ಸಾಧ್ಯವಿಲ್ಲ. ತಾನು ತಿಳಿದುಕೊಳ್ಲಬಲ್ಲೆ, ತಾನು ಮಾಡಬಲ್ಲೆ, ತನಗೇನು, ನಾನು ಹಾಗೆ ಎಂದೆಲ್ಲ ವಿಚಾರ ಮಾಡುವವನು ಬುದ್ಧಿಯಿಲ್ಲದವನು. ಅಂತಹ ಅಹಂಕಾರದಿಂದ ಆತನನ್ನು ಹೊಂದುವುದು ಎಂದಿಗೂ ಸಾದ್ಯವಿಲ್ಲ. ಬುದ್ಧಿಯಿದ್ದವನು ಖಂಡಿತವಾಗಿಯೂ ಭಗವಂತನೆದುರು ತನ್ನ ಅಹಂಕಾರವನ್ನು ತೋರಿಸುವುದಿಲ್ಲ. ಅಪಿ! ನಿನ್ನ ಬಳಿ ಏನಿದೆ ಎಂದು ನೀನು ಅಹಂಕಾರವನ್ನು ತೋರಿಸುವೆ? ಸರ್ವವೂ ಅವನ ನಿಯಂತ್ರಣದಲ್ಲೇ ಇದ್ದಾಗ ನೀನು ಏಕೆಂದು ಅಹಂಕಾರವನ್ನು ಫ್ರಭುವಿನೆದುರಿಗೆ ತೋರಿಸುವೆ? ಅದಕ್ಕೆಲ್ಲ ಅರ್ಥವೇ ಇಲ್ಲ ಎನ್ನುತ್ತ ಸದ್ಗುರುಗಳು ಮುಗುಳ್ನಕ್ಕರು.
ಅದಿರಲಿ, ಈ ಭಜನೆಯನ್ನು ಕೇಳಿ ಸಂತೋಷವಾಯಿತು ಎನ್ನುತ್ತ ಗುರುಗಳು ಹತ್ತಿರವೇ ಕುಳಿತಿದ್ದ ಶಿಷ್ಯರ ಬಳಿ ಎರಡು ಬಾರಿ ಇದನ್ನು ಹೇಳಿಬಿಡಿ, ಕೇಳಿಕೊಂಡು ತಾನು ಹೊರಡುವೆ ಎಂದರು. ಭಜನೆಯನ್ನು ಪ್ರೀತಿಯಿಂದ ಆಲಿಸಿದ ಗುರುಗಳು  ನಸುನಗುತ್ತ ಎದ್ದು ಹೊರಟರು.

ಏಕ ಏವ ಪರಬ್ರಹ್ಮ ಪರಮಾತ್ಮಾ ದಿಗಂಬರಃ
ಸ್ವಯಮೇವ ಗುರುಃ ಸಾಕ್ಷಾತ್‌ ಸುಬ್ರಾಯಃ ಪಾತು ನಃ ಸದಾ

  
https://drive.google.com/file/d/0B2qicK8F95Nfd2pFSGhGSFdCX2M/view?usp=sharing

ಸದ್ಗುರುಗಳು ಹಸ್ತಾಕ್ಷರ ಪ್ರಸಾದದ ರೂಪದಲ್ಲಿ ದಯಪಾಲಿಸಿದ ಅಭಯ



2014 ರ ಕಾರ್ತೀಕ ಮಾಸದಲ್ಲಿ ಭಕ್ತರೊಬ್ಬರು ಭಗವಾನ್‌ ಸುಬ್ರಾಯ ಮಹಾರಾಜರನ್ನು ನಮಸ್ಕರಿಸಿ, ಸದ್ಗುರುಗಳು ಹಸ್ತಾಕ್ಷರ ಪ್ರಸಾದವನ್ನು ನೀಡಬೇಕಾಗಿ ಬೇಡಿಕೊಂಡರು.
ಅದನ್ನು ಪ್ರೀತಿಯಿಂದ ಮನ್ನಿಸಿದ ಮಹಾರಾಜರು ತಮ್ಮ ಮಂಗಲಮಯವಾದ ಹಸ್ತಾಕ್ಷರದಲ್ಲಿ ಈ ಕೆಳಗಿನಂತೆ ಅಭಯವನ್ನು ನೀಡಿದರು-

‘‘ ಯಾರೇ ಆದರೂ ಪೂರ್ಣ ಶ್ರದ್ಧೆಯಿಂದ ಶ್ರೀಪಾದಾ, ಶ್ರೀಧರಾ, ಸುಬ್ರಾಯ ಎಂದು ಸ್ಮರಿಸಿದರೆ ಅವರ ಎಲ್ಲ ಪಾಪ ತಾಪಗಳನ್ನೂ ಪರಿಹರಿಸಿ ಅವರನ್ನು ರಕ್ಷಿಸುತ್ತೇನೆ. ಇದು ನನ್ನ ವ್ರತ.’’

ಅಭಯ ವಚನ



"ಸಕಲ ಬ್ರಹ್ಮಾಂಡಗಳ ಒಳಗೂ, ಹೊರಗೂ, ಎಲ್ಲೆಡೆಗೂ, ಎಲ್ಲವನ್ನೂ ಆವರಿಸಿರುವ ಆದ್ಯ ಗುರುಶಕ್ತಿಯು ನಾನೇ. ಯಾರೇ ಆದರೂ ಪ್ರೀತಿಯಿಂದ ನನ್ನನ್ನು ಸ್ಮರಿಸಿದರೆ ಅವರ ಪಾಪಗಳನ್ನು ನನ್ನ ಮೇಲೆ ಆಕರ್ಷಿಸಿಕೊಂಡು ಅವರನ್ನು ಉದ್ಧರಿಸುತ್ತೇನೆ. ಇದು ನನ್ನ ವ್ರತ."
-ಭಗವಾನ್‌ ಸುಬ್ರಾಯ ಮಹಾರಾಜರು ತಮ್ಮ ಶಿಷ್ಯರುಗಳಿಗೆ ನೀಡಿರುವ ಅಭಯ ವಚನ

ಸಿದ್ಧವನ





ಭಗವಾನ್ ದತ್ತಯೋಗೀಶ್ವರ ಸ್ವಾಮಿ ಮಹಾರಾಜರ ದಿವ್ಯ ಸಾನ್ನಿಧ್ಯದಿಂದ ಪ್ರಕಾಶಿಸುತ್ತಿರುವ ಪವಿತ್ರವಾದ ಆಶ್ರಮವೇ ಸಿದ್ಧವನ.

ಮೋಕ್ಷಾನಂದದಾಯಕನಾದ ದತ್ತಾತ್ರೇಯ ಪ್ರಭುವು ಸಿದ್ಧವನದಲ್ಲಿ ರಾರಾಜಿಸುತ್ತಿದ್ದಾನೆ. ಇಂತಹ ಪವಿತ್ರವಾದ ಅವಧೂತಾಶ್ರಮದ ಆವಾರದಲ್ಲಿ ದತ್ತಾತ್ರೇಯ ದೇವಸ್ಥಾನ, ಅನಘಾಮಾತೆಯ ದೇಗುಲ, ಅತ್ರಿ-ಅನಸೂಯಾ-
ಸಾಈ ಮಂದಿರ, ದ್ವಾದಶ ಜ್ಯೋತಿರ್ಲಿಂಗಗಳು-ಗಣಪತಿ , ಆದಿಶೇಷ ಮೊದಲಾದ ದೇವಾಲಯಗಳಿವೆ. ಜಗದ ಯಾವುದೇ ಮೂಲೆಯಲ್ಲಿದ್ದು, ಪ್ರಾಮಾಣಿಕವಾಗಿ ಆತ್ಮಜ್ಞಾನಕ್ಕಾಗಿ ಪ್ರಯತ್ನಿಸುವವರಿಗೆ ಅನುಕೂಲ ಮಾಡಿಕೊಡುತ್ತಿರುವ ಧರ್ಮಧ್ವಜವಿದೆ.

ಸಿದ್ಧವನವು ಮೋಕ್ಷಸಾಧನಕ್ಕಾಗಿಯೇ ಮೀಸಲಾಗಿರುವ ಕ್ಷೇತ್ರ. ಯಾವ ಪ್ರತಿಷ್ಠೆಯ ಗುಂಗಿಲ್ಲದೆ, ತರ್ಕದ ಹಂಗಿಲ್ಲದೆ, ಶಾಂತವಾಗಿ ಗುರುಸೇವೆ ಮಾಡುತ್ತ, ನಾರಾಯಣಸ್ವರೂಪಿ ಗುರುದೇವನ ಮಾರ್ಗದರ್ಶನದಲ್ಲಿ ಆತ್ಮಾನಂದವನ್ನು ಹೊಂದಲಿಚ್ಛಿಸುವ ಸಾಧಕರಿಗೆ ಸಿದ್ಧವನದಲ್ಲಿ ಯಾವಾಗಲೂ ಅವಕಾಶವಿದೆ.

************************************************************************

ಗುರುಸ್ತುತಿ :

ಏಕ ಏವ ಪರಬ್ರಹ್ಮ ಪರಮಾತ್ಮಾ ದಿಗಂಬರಃ
ಸ್ವಯಮೇವ ಗುರುಃ ಸಾಕ್ಷಾತ್ ಸುಬ್ರಾಯಃ ಪಾತು ನಃ ಸದಾ

**************************************************************

ಜಯ ಜಯ ಗುರುದೇವ ದತ್ತ